ಅಂತರ

ಹುಡುಗನಾಗಿದ್ದ ದಿನಗಳ ನೆನಪು : ಆಗ
ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ;
ಹೊರಗಿನ ಬಿಸಿಲು
ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು
ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ
ಜಲದ ರೇಸಿಮೆಹಾಳೆ ಸೀಳಿ ಹಾಯುವ, ಹಾಗೆ
ಹೀಗೆ ಹೇಗೋ ಹೊರಳಿ ಉರಿಯ ಚಿಮ್ಮುವ ಮೀನು,
ಕೆಳಗೆ ಥಳ ಥಳ ಮರಳು
ಬಾದಾಮಿ ದ್ರಾಕ್ಷಿ ಗೋಡಂಬಿ ಬಿಕ್ಕಿದ ಹಾಗೆ
ಹೊಳೆಯ ಮೂಕ ಸುಖಕ್ಕೆ ಮಾತು ದಕ್ಕಿದ ಹಾಗೆ
ಥರಾಥರಾವರಿ ಹರಳು.

ಇದೆಲ್ಲ ತಡಿಯಲ್ಲಿ.
ಆರಂಭದಿಂದ ಹತ್ತಾರು ಅಡಿಯಲ್ಲಿ
ಯಾರಿಗು ನಿರಾಳ, ಹೊಳೆ ಇಳಿದು ಹೋದಂತೆಲ್ಲ
ಒಳ‌ಒಳಗೆ ಕೆಳಕೆಳಗೆ
ಈಜುಗಲಿ ಸೀನ ಆಚಾರಿ ದತ್ತಣ್ಣನಿಗು
ತಳಸಿಗದ ಕಾಳಹಸುರಿನ ಆಳ ಆಭೀಳ,
ಯಾವ ಕಾಲದ್ದೊ
ಯಾರ್‍ಯಾರೆಲ್ಲ ಎಸೆದದ್ದೊ
ಗಂಗೆಯ ಹೆಸರು ಹೇಳಿ ಯಾರೆಲ್ಲ ಮುಡಿಸಿದ್ದೊ
ನೆರೆಮೊರೆದು ಕರೆಯೊಡೆದು ಜಾರಿ ಒಳಸೇರಿದ್ದೊ
‘ಮುಳುಗಿ ತರಬಲ್ಲೆಯೋ ಎಲ್ಲಿ ತಾ?’ ಎನ್ನುವ
ಸವಾಲಿನಲ್ಲಿ ಎಸೆದದ್ದೊ
ಆಣೆ ಪಾವಾಣೆ ರೂಪಾಯಿ ಚಿಲ್ಲರೆಯಿರಲಿ
ಪಾತ್ರೆ ಪಡಿ ಬೆಳ್ಳಿ ಬಂಗಾರ ನಡುಸಿಂಗಾರ ಕೂಡ ಇರುವ ವದಂತಿ
ಅರೆಕಂತಿ ನದಿ ನಡುವೆ ಕರೆಯುತ್ತ ನಿಂತಿರುವ
ಆನೆ ಬಂಡೆಯ ಬದಿಗೆ
* * *

ಕಲಿಯುಕ್ಕಿ ಆನೆಬಂಡೆಯ ಕಡೆಗೆ ಈಜಿರುವ
ಪಡ್ಡೆಹುಡುಗರ ದಂಡು.
ಹತ್ತಿ, ಬಂಡೆಯ ನೆತ್ತಿ ಕೂಗಿ ಹಾರುವ ದಿಟ್ಟ ಕಿಟ್ಟಡಿಗ.
ಹುಚ್ಚುಕೆಚ್ಚಿಗೆ ಕಟ್ಟುಬೆರಗಾಗಿ ನಿಂತ ಕಟ್ಟಾಳುಗಳ ಎದುರಲ್ಲಿ
ಹೊಸ ಹೊಸಾ ಕಸರತ್ತು.
ಐದಾರು ಆಳು ಆಳದ ಮರಳ ಮೈತಬ್ಬಿ ಬರುವ
ಬಿಟ್ಟಿ ಷರತ್ತು,
ಮುಳುಗಿದನೊ, ಉಸಿರು ಬಿಗಿಹಿಡಿದು, ದಿಟ್ಟಿಯ ನೆಟ್ಟು
ರಕ್ಷೆಕಾಯುವ ಗುಂಪು.
ಬರಲಿಲ್ಲ ಒಂದು ಕ್ಷಣ
ಎಲ್ಲ ಕಣ್ಣುಗಳಲ್ಲಿ ತವಕ ಅಶಂಕೆ ಕಳವಳ ಏನೊ ತಳಮಳ.
ಮರುಚಣ
ಬಂದ ಹೋ ಹೋ ಬಂದ ಎಂಬ ಕೇಕೆಯ ನಡುವೆ
ಛಂಗನೇ ಮೇಲೆದ್ದು ಮರಳ ಸಾಕ್ಷಿಯ ತೂರಿ
ಈಜಿ ಸಾಗುವ ಛಂದ,
ಈ ಸಾಹಸಕ್ಕೆಲ್ಲ ಬೆಲೆಯಿತ್ತು, ಮೆಚ್ಚಿಗೆ ಇತ್ತು, ಮೇಲು ನೆಲೆಯಿತ್ತು.
ಮೇಲಾಟ ಹೂಡಿ ಸೆಣಸುವ ಸರಿಸವಾಲುಗಳ
ರಣಧೀರ ಪಡೆಯಿತ್ತು.
* * *

ಈಗ
ನದಿಯಲ್ಲಿ ನೀರಿಲ್ಲ,
ಏಕೊ ಕಾಲನೆ ಬಲ್ಲ,
ಕಾಸಿ ಬರೆ ಎಳೆದಂತೆ ತಳದ ಮೈಯಲ್ಲೆಲ್ಲ
ಕಪ್ಪು ಹಸಿರಿನ ನೀಳ ಪಟ್ಟೆ
ಕೊಳೆಯುವ ಬಟ್ಟೆ :
ನಡುನಡುವೆ ನಡೆಗೊಂದು ನಾಯಿಕೊಡೆ ಪಾಚಿತೊಡೆ,
ಹೆಸರಿರದ ದೆಸೆಯಿರದ ಸಸ್ಯ
ಕುರುಚಲು ಜೊಂಡು;
ರಕ್ತಮಾಂಸವೆ ಇರದ ಅಸ್ಥಿಪಂಜರ ತೆರೆದ
ಒಡಲ ಭೀತಿ
ನದಿಯ ರೀತಿ.
ಹರಿಗೋಲು ದೋಣಿ ತಪ್ಪೋತ್ಸವಗಳಿರಲಿ
ಹೆಜ್ಜೆ ಮುಳುಗದ ಲಜ್ಜೆನಡಿಗೆ ನದಿಗೆ.
ಬಣ್ಣ ಬಾವುಟವಿರದ
ಬಿದಿರ ಗುಮ್ಮಟ ಮುರಿದ
ಪಾಳುಗುಡಿ ತೇರಿನ ಬೋಳುಮಂಡೆ
ಅಸಿಧಾರೆ ಬಿಸಿಲಲ್ಲಿ ಆನೆಬಂಡೆ.
ಬಟ್ಟೆ ಒಗೆಯುವ ಕಲ್ಲು
ಊರೊಳಗೆ ಬಂದು
ಮನೆ ಮೆಟ್ಟಿಲು,
ಲಾರಿಗಟ್ಟಲೆ ಮರಳು ತೋಡಿ ಮಾಡಿದ ಹೊಂಡ
ವಟರುಗಪ್ಪೆ ಕುಲಕ್ಕೆ
ತೊಟ್ಟಿಲು.
* * *

ಬೆತ್ತಲಾಗಸದಲ್ಲಿ ಮುಂದೆಂದೊ ಮತ್ತೆ
ಕರಿಮುಗಿಲ ಜಹಜುಗಳ ಸಾಲು;
ಸಾಗಿ ಬರಲಿವೆ ದಿಕ್ಕುದಿಕ್ಕಿಂದ, ಸುಳಿವಂತೆ
ಭಾಗೀರಥಿಯ ಹೆಜ್ಜೆಗಾಲು.
ಪುಟ್ಟ ಮಸಿಗುಡ್ಡೆಗಳು ಮೈಗೆ ಮೈ ತಾಗಿ
ಬೆಳೆದೀತು ಕಾರ್ಮುಗಿಲ ಬೆಟ್ಟ;
ಇಷ್ಟು ದಿನಗಳ ಹೊಟ್ಟೆಯುರಿಯೆ ನಡಿಗೆಗೆ ನುಗ್ಗಿ
ನಡುಗದೇ ಕುಣಿತಕ್ಕೆ ಅಟ್ಟ?
ಬತ್ತಿ ಕೊಳೆಯುವ ಹೊಳೆಯ ಬಸಿರಿಗನಸು
ಕೆತ್ತಿರುವ ನೆಲದೆದೆಗೆ ಹಸಿರಿನುಣಿಸು
ಸಂದಾಯವಾದೀತು ಎಂದಾದರೊಂದು ದಿನ
ಸಪ್ಪೆ ಬಾಳಿಗೆ ಉಪ್ಪು ನಿಂಬೆ ಮೆಣಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವನೆಂದರೆ ಒಂದು ವ್ಯಕ್ತಿಯಲ್ಲ
Next post ಒಂದು ಮುಂಜಾವಿನಲಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys